Monday 16 January 2012


ನಮಗಿದೆಲ್ಲ ಮೊದಲೇ ಗೊತ್ತಿತ್ತು. ಅವೆಲ್ಲ ಆಕ್ಷೇಪಾರ್ಹಅಂತೇನೂ ಅನ್ನಿಸದೆ ಸಾಧಕನಾಗಿ ನಾವು ಅವರನ್ನ ನೋಡಿದ್ದೆವು. ಈಗೊಬ್ಬ ಮನುಷ್ಯರು ಹೊಸತಾಗಿ ಓದಿಕೊಂಡು ಗಾಬರಿ ಬಿದ್ದಿದ್ದಾರೆ. ಇಂಥಾ ವಿವೇಕಾನಂದ ಐಕಾನ್ ಹೇಗಾದನಪ್ಪಾ ಅಂತ ನಿದ್ದೆಬಿಟ್ಟಿದ್ದಾರೆ. ದಡ್ಡ, ಕಾಯಿಲೆಯ, ಬಡವ, ಅಬ್ರಾಹ್ಮಣ ನರೇಂದ್ರ ನಮ್ಮ ಐಕಾನ್ ‘ಸ್ವಾಮಿ ವಿವೇಕಾನಂದ’ ಆಗಿರೋದು ಯಾಕೆ ಗೊತ್ತಾ?
ಅವರು…..
ಶ್ರೀಮಂತ ಮನೆತನದಲ್ಲಿ ಹುಟ್ಟಿಯೂ ಬಡತನದ ಕಷ್ಟಗಳನ್ನೆಲ್ಲ ಎದುರಿಸಿದ್ದರು.
ತಮ್ಮೆಲ್ಲ ಅನಾರೋಗ್ಯಗಳ ನಡುವೆಯೂ ನಿರಂತರ ಓಡಾಟದಲ್ಲಿ ತೊಡಗಿಕೊಂಡು ಸೇವೆಗೆ, ಅಧ್ಯಾತ್ಮಕ್ಕೆ ತಮ್ಮನ್ನು ಕೊಟ್ಟುಕೊಂಡಿದ್ದರು. ಸ್ಟೀಫನ್ ಹಾಕಿಂಗ್ ನಂತೆ ಆನಾರೋಗ್ಯದಿಂದ ಇದ್ದೂ….
ಮಾಂಸಾಹಾರಿಯಾಗಿ, ಬ್ರಾಹ್ಮಣೇತರನಾಗಿದ್ದು ಗುರುವಿನ ಮನ್ನಣೆ ಪಡೆದಿದ್ದ ಭಾರತದ ಪರಂಪರೆಯ ನೂರಾರು ಅಧ್ಯಾತ್ಮ ಸಾಧಕರಲ್ಲಿ ವಿವೇಕಾನಂದರೂ ಒಬ್ಬರಾಗಿದ್ದರು.
ಸಾಂಪ್ರಾದಯಿಕ ಶಿಕ್ಷಣ ಪಡೆಯದೆ ಜಾಗತಿಕ ಮನ್ನಣೆ ಪಡೆದ ಐನ್ ಸ್ಟೀನನಂತೆ, ವಿವೇಕಾನಂದ ಕಡಿಮೆ ಅಂಕಗಳ ಅಸಾಧಾರಣ ಬುದ್ಧಿವಂತನಾಗಿದ್ದರು.
ವಾಯ್ಸ್ ಚೆನ್ನಾಗಿಲ್ಲ ಅಂತ ತಿರಸ್ಕರಿಸಲ್ಪಟ್ಟಿದ್ದ ಅಮಿತಾಭನಂತೆ(ಈಗಿನ ನಮ್ಮ ಬಾಲಿವುಡ್ ಬಾದ್ ಷಾಹ್) ಅವರೂ ‘ಪಾಠ ಕಲಿಸೋಕೆ ಬರೋದಿಲ್ಲ’ ಅಂತ ಅವಕಾಶ ನಿರಾಕರಿಸಲ್ಪಟ್ಟಿದ್ದರು.
ವಿವೇಕಾನಂದರು ತಮ್ಮ ಅನಾರೋಗ್ಯ ಕೆಲಸಕ್ಕೆ ತಡೆಯಾಗಿದೆ ಅಂತಲೇ ಮಿಕ್ಕವರಿಗೆ ದೇಹವನ್ನ ಹುರಿಗಟ್ಟಿಸಿಕೊಳ್ಳಿ ಅಂತ ಹೇಳ್ತಿದ್ದದ್ದು. ಅವರಿಗೆ ಗೊತ್ತಿತ್ತು, ದೇಹ ಚೆನ್ನಾಗಿದ್ದರೆ ಮಾತ್ರ ಕೆಲಸ ಸುಸೂತ್ರ ನಡೆಯುವುದು ಅಂತ. ವಿವೇಕಾನಂದ ಹೇಳಿದ್ದರು, ‘ಭಗವದ್ಗೀತೆ ಮುಚ್ಚಿಟ್ಟು ಫುಟ್ ಬಾಲ್ ಆಡಿ ಹೋಗಿ, ಬದುಕು ಏನೂಂತ ಗೊತ್ತಾಗುತ್ತೆ’ ಅಂತ.
ಅದಕ್ಕಾಗೇ ಅವರು ನಮ್ಮ ಐಕಾನ್.
ವಿವೇಕಾನಂದರು ಕ್ಷತ್ರಿಯ ಕುಲದಲ್ಲಿ ಹುಟ್ಟಿದ್ದರು. ನಾಲ್ಕೂ ವರ್ಣಗಳ ಲಕ್ಷಾಂತರ ಅಧ್ಯಾತ್ಮಜೀವಿಗಳನ್ನು ಮೆರೆದಾಡಿಸಿದ ಭಾರತಕ್ಕೆ ನರೇಂದ್ರನೊಬ್ಬ ಹೆಚ್ಚೆ? ಅಧ್ಯಾತ್ಮ ಜೀವಿಗಳು ಪರಸ್ಪರ ‘ಸೋದರ’ ಅಂತ ಕರೆದುಕೊಳ್ಳೋದು ಸಾಮಾನ್ಯರಿಗೆ ಗೊತ್ತಿರೋದಿಲ್ಲ. ಸ್ವಾಮೀಜಿ ಕೂಡ ಬೇರೆಯವರನ್ನ ಸೋದರ, ಸೋದರಿ ಅಂತಲೇ ಕರೀತಿದ್ದಿದ್ದು, ನಡೆದುಕೊಳ್ತಿದ್ದಿದ್ದು.
ಇಂಥ ಜಾಗತಿಕ ಸೋದರತ್ವ ಕಟ್ಟಿಕಟ್ಟರಲ್ಲ. ಅದಕ್ಕಾಗೇ ಅವರು ನಮ್ಮ ಐಕಾನ್.
ವಿವೇಕಾನಂದರಿಗೆ ಚಿಕನ್ ಕಬಾಬ್ ತುಂಬಾ ಇಷ್ಟ. ಹಾಗಂತ ಈ ತಿಂಡಿಪೋತ ವಾರಗಟ್ಟಲೆ ಖಾಲಿ ಹೊಟ್ಟೆಯಲ್ಲಿ ಇರಬಲ್ಲವರಾಗಿದ್ದರು. ಬಾರಾನಾಗೊರ್ ಮಠದಲ್ಲಿರುವಾಗ ಬೇವಿನ ಸಾರು, ಮಂಡಕ್ಕಿ ತಿಂದು ಬದುಕಿದ್ದರು. ಬಹುತೇಕ ಬಂಗಾಳಿಗಳ ಹಾಗೆ ಅವರೂ ಹುಕ್ಕಾ ಗುಡುಗುಡಿ ಸೇದ್ತಾ ಇದ್ದರು. ಆದರೆ ಆ ಯಾವ ಸಂಪ್ರದಾಯವೂ ಅವರಿಗೆ ಚಟವಾಗಿರಲಿಲ್ಲ. ಬದುಕಿನ ವೈಭವದ ಎಲ್ಲ ಸಾಧ್ಯತೆಗಳನ್ನು ಒಳಗೊಳ್ಳುತ್ತಲೇ ಅಂಟಿಕೊಳ್ಳದ ವಿರಾಗಿಯಾಗಿದ್ದರು ವಿವೇಕಾನಂದ.
ಈ ಕಾರಣಕ್ಕಾಗಿಯೂ ಅವರು ನಮ್ಮಐಕಾನ್.
ವಿವೇಕಾನಂದ ತಮ್ಮ ಆಸಕ್ತಿ ಕ್ಷೇತ್ರದ ಯಾವುದನ್ನೇ ಓದಿದರೂ ಪ್ರತಿ ಪುಟದ ಬರಹ ನೆನಪಿಟ್ಟುಕೊಳ್ಳುತ್ತಿದ್ದರು. ಅವರು ಒಮ್ಮೆ ಕೇಳಿತಿಳಿದ ವಿಷಯವನ್ನು ಮರೆಯುತ್ತ ಇರಲಿಲ್ಲ. ಜಗತ್ತಿನಲ್ಲಿ ಮೊದಲಿಂದಲೂ ಹಂಗೇನೇ. ರಾಜಯಕ್ಕೆ- ದೇಶಕ್ಕೆ ಫಸ್ಟ್ ರ್ಯಾಂಕ್ ಬಂದ ಯಾವ ವ್ಯಕ್ತಿಯೂ ಶತಮಾನಗಟ್ಟಲೆ ನಿಲ್ಲುವಂಥ ಸಾಧನೆ ಮಾಡಿಲ್ಲ. ಪ್ರೈಮರಿ, ಹತ್ತನೆ ತರಗತಿ ಹೀಗೆಲ್ಲ ಓದಿನಿಲ್ಲಿಸಿಕೊಂಡ ನಮ್ಮ ವಿಜ್ಞಾನಿಗಳು, ಕವಿಗಳು, ಶಿಕ್…. ಉಫ್… ಲಿಸ್ಟು ಕೊಡಬೇಕಾ!?
ಅದಕ್ಕೇ ವಿವೇಕಾನಂದ ನಮ್ಮ ಐಕಾನ್.
ಜಗತ್ತಿನ ಬಹುತೇಕ ಸಾಧಕರ ಮನೆ ಸ್ಮಶಾನವಾಗಿರುತ್ತೆ. ವಿವೇಕಾನಂದ ಹೊರತಲ್ಲ. ಇವತ್ತು ಕೊಂಡಾಡುವ ನಾವು ಅವತ್ತು ಇದ್ದಿದ್ದರೆ ಸ್ವಾಮೀಜಿಗೆ ಕಿರೀಟವೇನೂ ತೊಡಿಸ್ತಾ ಇರಲಿಲ್ಲ. ಯಾವುದೇ ವ್ಯಕ್ತಿಯ ಮಹತ್ತು ಗೊತ್ತಾಗೋದು ಅವನು ಸತ್ತ ಮೇಲೇನೇ. ಹೀಗೆ ನಾವಿಷ್ಟು ಗೋಳಾಡಿಸಿದ್ದರೂ ‘ನನ್ನ ಭಾರತ… ನನ್ನ ಭಾರತ…’ ಅನ್ನುತ್ತಾ ಇಲ್ಲಿಯವರನ್ನು ನೆನೆದು ಅಮೆರಿಕದಲ್ಲಿ ತಾವು ನೆಲದ ಮೇಲೆ ಮಲಗಿದ್ದರಲ್ಲ, ಅದಕ್ಕೇ ಸ್ವಾಮೀಜಿ ನಮ್ಮ ಐಕಾನ್.
ಸೆಕ್ಸ್ ಮತ್ತು ಅಧ್ಯಾತ್ಮ ಒಟ್ಟಿಗೆ ಇರಲಾರದು ಅನ್ನುವ ಮನಸ್ಥಿತಿ ಇಟ್ಟುಕೊಂಡ ಭಾರತ- ಅವೆರಡನ್ನೂ ಬೆರೆಸಿ ಬೋಧಿಸಿದ್ದ ಓಶೋ ಅಂಥವರನ್ನೆ ಒಪ್ಪಿಕೊಂಡು ‘ಆಚಾರ್ಯ ರಜನೀಶ್’ ಅಂತ ಕರೆದಿದೆ. ಚಿನ್ನದ ಹಲ್ಲು ಕಟ್ಟಿಸಿಕೊಂಡಿದ್ದ ಇಸ್ಕಾನ್ ಸನ್ಯಾಸಿ ಅಭಯಚರಣ ಡೇಯವರನ್ನು ಶ್ರೀಲ ಪ್ರಭುಪಾದ ಅಂತ ಗೌರವಿಸಿದೆ. ನಡುವಿನೊಂದಷ್ಟು ವರ್ಷ ಕಳೆದುಹೋಗಿದ್ದ ಕ್ರಿಸ್ತನ ಬದುಕು ಕೆದಕದೆ ಹನ್ನೊಂದನೆ ಅವತಾರ ಮಾಡಿಕೊಂಡು ಅರಗಿಸಿಕೊಂಡಿದೆ. ಕಲ್ಲೇಟಿನಿಂದ ತಪ್ಪಿಸ್ಕೊಳ್ಳೋಕೆ ವಿವರಗಳನ್ನ ಬಿಟ್ಟು ಹೇಳ್ತಿದ್ದೀನಿ; ………………………………………………….. ರನ್ನೂ ನಮ್ಮವರಲ್ಲಿ ಒಬ್ಬರಾಗಿಸಿಕೊಂಡು, ಮುಸ್ಲಿಮ್ ಜನಾಂಗದೊಡನೆ ಸ್ನೇಹದಿಂದಿದೆ.
ಹೀಗಿರುವಾಗ;
ಚಾಟಿ ಏಟಿನಂಥ ಮಾತು ಬೀಸಿ ನಮ್ಮ ಜಾತೀಯ ಮಾನಸಿಕ ರೋಗಕ್ಕೆ ಮದ್ದು ನೀಡಿದ, ಹಿಂದೂ ಧರ್ಮದ ಸುಧಾರಣೆಗೆ ಅತ್ಯಗತ್ಯವಾಗಿದ್ದ ಜೀವಶಿವಸೇವೆಯನ್ನು ನೆನಪು ಮಾಡಿಕೊಟ್ಟ, ನಮ್ಮೆಲ್ಲರ ನೋಟವನ್ನು ವಿಸ್ತಾರಗೊಳಿಸಿದ ಸ್ವಾಮಿ ವಿವೇಕಾನಂದ ನಮ್ಮ ಐಕಾನ್ ಆಗಬಾರದು ಅಂದರೆ ಹೇಗೆ?
ನಮ್ಮ ನಡುವಿನ ಮನುಷ್ಯರೊಬ್ಬರು ಇತ್ತೀಚೆಗೆ ಪುಸ್ತವೊಂದನ್ನು ಓದಿಕೊಂಡು ಇದೇ ಮಾತುಗಳನ್ನ ಆಕ್ಷೇಪದ ದನಿ ಹೊರಡಿಸುವಂತೆ ಬರೆದಿದ್ದಾರೆ. ಈ ಎಲ್ಲ ವಿಷಯ ವಿವೇಕಾನಂದರನ್ನ ಐಕಾನ್ ಮಾಡಿಕೊಂಡವರಿಗೆ ಗೊತ್ತಿಲ್ಲ, ತಾನು ಮಹಾಜ್ಞಾನವೊಂದನ್ನು ಬೋಧಿಸುತ್ತಿರುವ ಅನ್ನುವ ಧಾಟಿ ಇದೆ. ಅಥವಾ ತಮ್ಮ ಈ ‘ಸತ್ಯಶೋಧಕ ಲೇಖನ’ದಿಂದ ಸಾವಿರಾರು ಜನ ವಿವೇಕಾನಂದರ ಮೇಲಿನ ಅಭಿಮಾನವನ್ನು ಹಿಂಪಡೆಯುತ್ತಾರೆ ಅಂತ ಅವರು ಭಾವಿಸಿರಬಹುದು.
ಬರೆದ ಮನುಷ್ಯರೇ ತಿಳಿಯಿರಿ. ಯಾರೋ ಮಡಿಮಠದ ಆಚಾರ್ಯರನ್ನೋ ಮನು ಮಹಾತ್ಮರನ್ನೋ ಹಿಂದೂ ಕುಲ ತನ್ನ ಐಕಾನ್ ಅಂತ ಕರೆದು ಮೆರೆಸಿದ್ದರೆ ಗಾಬರಿ ಪಡಬೇಕಿತ್ತು. ಅದು ಸರಿಯಾದ ಸಮಯದಲ್ಲಿ ಸರಿಯಾದ ಆಯ್ಕೆಯನ್ನೇ ಮಾಡಿಕೊಂಡಿದೆ. ನೀವು ಅಂದುಕೊಂಡಷ್ಟು ಪೆದ್ದರಲ್ಲ ಯುವ ಸಮೂಹ. ನೆಟ್ಟಿನಲ್ಲಿ ಸ್ವಾಮೀಜಿಯ ಸಾಧ್ಯವಿರುವ ಎಲ್ಲ ವಿಷಯಗಳನ್ನು ಕಲೆಹಾಕಿಯೇ ಜೈಕಾರ ಕೂಗುತ್ತದೆ. ನೀವು ಬರೆಯದೆ ಬಿಟ್ಟಿರುವ ರೂಮರ್ ಗಳನ್ನು ಸಹ ಅದು ಓದಿಕೊಂಡಿದೆ. ಹೀಗಿರುತ್ತ, ಸಂಕುಚಿತ ಹಿಂದುತ್ವದಿಂದ ವಿವೇಕಾನಂದರ ವಿಶ್ವಮಾನವ ತತ್ತ್ವಕ್ಕೆ ತೆರೆದುಕೊಳ್ಳಲು ಹೊರಟು, ಅವರನ್ನ ಮುಂದಿಟ್ಟುಕೊಂಡು ಸಂಭ್ರಮದ 150ನೆ ಜನ್ಮೋತ್ಸವ ಆಚರಿಸ್ತಿರೋದಕ್ಕೆ ಸಂತೋಷಪಡಿರಿ.
ನಾವು ವಿವೇಕಾನಂದರನ್ನು ಶೈಕ್ಷಣಿಕ ವೈಫಲ್ಯದವ, ಕಾಯಿಲೆಯವ, ಮಾಂಸಾಹಾರಿ, ಬ್ರಾಹ್ಮಣೇತರನಾಗಿದ್ದೂ ಸಾಧನೆ ಮಾಡಿದವ ಅಂತ ಅಪ್ಪಿಕೊಂಡಿದ್ದೀವಿ. ನೀವು, ತಿಳಿದವರು ಅಂತ ಅನ್ನಿಸಿಕೊಂಡವರು ಈ ವಿಷಯಗಳನ್ನು ಕೀಳಾಗಿ ಬಿಂಬಿಸುತ್ತ ಅವರನ್ನು ಅನರ್ಹಗೊಳಿಸುವ ಯತ್ನಕ್ಕೆ ಯಾಕೆ ಕೈಹಾಕಿದ್ದೀರಿ!?

 ವಿಕೃತಿ ಅಂದರೆ ಇದೇನಾ?
                                                                                                                                        - ಚೇತನಾ ತೀರ್ತ್ಹಳ್ಳಿ


No comments:

Post a Comment